Archive for the ‘vichaara’ Category


Mumbai-Protest-against-Assam-riots-turns-violent
ಮೊನ್ನೆ ಕಡಲ ತಡಿಯ ತಲ್ಲಣ ಪುಸ್ತಕ ತಕಂಡ್ ಬಂದ್ ಓದ್ತಾ ಇದ್ದೆ. ಈ ಪುಸ್ತಕ ಓದ್ತಾ ಇಪ್ಪತಿಗೆ ನಮ್ ಕುಂದಾಪ್ರ ಬದಿಯಗೆ ನಾ ಶಾಲಿಗ್ ಹೋಪತಿಗೆ ನೆಡದ್ ಒಂದ್ ಗಲಾಟಿ ನೆನ್ಪ್ ಆಯ್ತ್. ಅದಕ್ಕೂ ಮೊದ್ಲ್ ಅಷ್ಟ್ ದೊಡ್ಡ್ ಗಲಾಟಿ ನೆಡ್ದಿತೋ ಇಲ್ಯೋ ಗೊತ್ತಿಲ್ಲ. ಆರೆ ಅದ್ ಮಾತ್ರ ಕುಂದಾಪ್ರ ಬದ್ಯಗೆ ನಾ ಕಂಡ್ ದೊಡ್ಡ್ ಗಲಾಟಿ

ಆಗ ನಾನ್ ಏಳ್ನೇ ಕ್ಲಾಸಗೆ ಇದ್ದೆ. ಕಮಲಶಿಲೆ ಶಾಲಿಗ್ ಹೋತಾ ಇದ್ದೆ. ಒಂದಿನ ನನ್ ಕ್ಲಾಸ್ಮೇಟ್ ರಘು ಅಂಬನ್ ಬೆಳಿಗ್ಗೆ ಬಂದನ್ ಒಂದ್ ಸುದ್ದಿ ಹಿಡ್ಕಂಡ್ ಬಂದಿದ್ದ. ಯಾರೋ ಸಾಯ್ಬ್ರ್ ಅಂಬ್ರ್… ಕಾರಗೆ ಬಂದದ್ದಂಬ್ರ್. ಒಬ್ಬ ಹಿಂದೂ ಹುಡ್ಗನ್ ಕಾರಿಗ್ ತುಂಬ್ಕಂಡ್ ಹೋಯಿರ್ ಅಂಬ್ರ್. ಪ್ಯಾಟಿ ಬದ್ಯಗೆ ಜೋರ್ ಗಲಾಟಿ ಶುರುವಾಯಿತ್ ಅಂಬ್ರ್. ಹಿಂದೂ ಹುಡ್ಗನಿಗೆ ಸಮಾ ಹೊಡ್ದಿರ್ ಅಂಬ್ರ್. ಹಾಂಗಂಬ್ರ್ ಹೀಂಗಂಬ್ರ್… ಅಂದೇಳಿ ಕತಿ ಹೇಳುಕ್ ಶುರು ಮಾಡಿದ. ನಾವೆಲ್ಲಾ ಅವ್ನ್ ಸುತ್ತ ಬಾಯ್ ಕಳ್ಕಂಡ್ ಅವ ಹೇಳ್ತಿದ್ ಕತಿ ಕೇಂತಾ ಕೂಕಂಡಿದ್ದಿತ್. ನಮ್ ನಮ್ಮೊಳ್ಗೇ ನಮ್ಗ್ ತಿಳ್ದ್ ಮಟ್ಟಿಗೆ ಗುಸು-ಗುಸು ಮಾತಾಡ್ಕಂತಾ ಇದ್ದಿತ್. ನಮ್ಗ್ ಆ ಸುದ್ದಿ ಎಷ್ಟ್ ವಿಚಿತ್ರ ಆಯಿ ಕಂಡಿತ್ ಅಂದ್ರೆ ಅದನ್ ನಂಗ್ ಹೇಳುಕ್ ಬತ್ತಿಲ್ಲ. ಅಲ್ಲಿವರಿಗೆ ನಾವ್ ಕೇಂಡದ್ ಏನಿದ್ರೂ ಪೇಪರಗೆ ಓದದ್ ಏನಿದ್ರೂ ಎಲ್ಲೋ ಹಾಂಗ್ ಆಯ್ತಂಬ್ರ್. ಕರ್ಫ್ಯೂ ಹಾಕಿರಂಬ್ರ್… ಇಷ್ಟ್ ಜನ ಸತ್ತ್ ಹೋರಂಬ್ರ್… ಆ ಎಲ್ಲೋ ಈಗ ನಮ್ ಕುಂದಾಪ್ರ ಆಯ್ತಲೆ ಅಂದೇಳಿ ಒಂಥರಾ ಹೆದ್ರಿಕಿ, ಒಂದ್ ನಮೂನಿ ಕುತೂಹಲ, ಟೆನ್ಷನ್. ಮಧ್ಯಾಹ್ನದ ಹೊತ್ತಿಗೆ ಸುದ್ದಿ ಹಗೂರ ಎಲ್ಲ ಬದಿಗ್ ಹರ್ಡುಕ್ ಶುರುವಾಯಿತ್ತ್. ಹುಡ್ಗ ಮೂಡ್‌ಬಗಿಯನ್ ಅಂಬ್ರ್. ಸಾಯ್ಬ್ರ್ ಹುಡ್ಗಿನ ಲವ್ ಮಾಡಿದ ಅಂಬ್ರ್… ಅದ್ಕೇ ಸಾಯ್ಬ್ರ್ ಎಲ್ಲಾ ಒಟ್ಟಿಗ್ ಸೇರಿ ಅವನ್ ಹೊತ್ಕಂಡ್ ಹೊಯಿರಂಬ್ರ್… ಹೀಂಗೆ ರೆಕ್ಕಿ-ಪುಕ್ಕ-ಬಾಲ ಎಲ್ಲ ಕಟ್ಕಂಡ್ ಇದ್ದದ್ ಇಲ್ದಿದ್ದದ್ ಎಲ್ಲಾ ಸೇರಿ ಸುದ್ದಿಯೇ ಸುದ್ದಿ.

ಮಧ್ಯಾಹ್ನದ ಮೇಲ್ ಬಸ್ ತಿರ್ಗುದ್ ಎಲ್ಲಾ ಕೈದ್ ಆಯ್ತ್. ಕಡಿಗ್ ಶಾಲಿಗ್ ರಜಿ ಕೊಟ್ರ್. ಬಸ್ಸಿಲ್ದೇ ನೆಡ್ಕಂಡೇ ಮನಿಗ್ ಹೋಪತಿಗೆ ಸಾಕ್ ಬೇಕಾಯ್ತ್. ಆರೂ ಮಾತಾಡುಕ್ ಬಿಸಿ ಬಿಸಿ ಸುದ್ದಿ ಇದ್ದಿತಲ್ದಾ… ಹಾಂಗಾಯ್ ನೆಡದ್ ದೂರ ಗೊತ್ತೇ ಆಯಲ್ಲ. ಮನಿಗ್ ಬಪ್ಪುರೊಳ್ಗೇ ಎಲ್ಲಾ ಬದ್ಯಗೂ ಸುದ್ದಿ ನಮ್‌ನಮೂನಿ ಬಣ್ಣ ಕಟ್ಕಂಡ್ ಎಲ್ಲರ್ ಬಾಯಗೂ ಅದೇ ಮಾತ್. ಅದ್ರೊಟ್ಟಿಗೆ ಕಂಡ್ಲೂರಗೆ ಗಲಾಟಿ ಅಂಬ್ರ್, ಸಿದ್ದಾಪುರ್ದಗೆ ಬಂದ್ ಅಂಬ್ರ್, ಕುಂದಾಪ್ರದಗೆ ಸಾಯ್ಬ್ರ್ ಗೂಡಂಗ್ಡಿಗೆಲ್ಲ ಬೆಂಕಿ ಕೊಟ್ಟಿರಂಬ್ರ್. ಹೊಸಂಗ್ಡಿಯಗೆ ಸಾಯ್ಬ್ರ್ ತ್ವಾಟ ಎಲ್ಲ ಹೊಡಿ ಮಾಡಿ ಹಾಕ್ರಂಬ್ರ್, ಕುಂದಾಪ್ರದಗೆ ಕರ್ಫ್ಯೂ ಹಾಕಿರಂಬ್ರ್… ಹೀಂಗೇ ಸುದ್ದಿಯೇ ಸುದ್ದಿ
ಅಂತೂ ರಾತ್ರಿ ಆಯ್ತ್. ಯಾವ್ ಬದಿಗ್ ಕೆಮಿ ಕೊಟ್ರೂ ಗಲಾಟಿದೇ ಸುದ್ದಿ. ರಾತ್ರಿ ಮಲ್ಕಂಡ್ ಬೆಳಿಗ್ಗೆ ಏಳುವತಿಗೆ ಮತ್ತೊಂದ್ ಭಯಂಕರ ಸುದ್ದಿ ಬಂದಿತ್ತ್. ನಮ್ ಊರಗ್ ಇದ್ದ್ ಒಂದೇ ಒಂದ್ ಸಾಯ್ಬ್ರ್ ಅಂಗ್ಡಿಗ್ ಯಾರೋ ಬೆಂಕಿ ಕೊಟ್ಟಿರ್. ಅಂಗ್ಡಿ ಪೂರ್ತಿ ಸುಟ್ಟ್ ಹೋಯ್ತ್. ಮುಲ್ಲಿಯಗೆ ಇದ್ದ್ ನಮ್ ಊರಗೇ ಹೀಂಗೆಲ್ಲ ಆತ್ತ್ ಅಂದೇಳಿ ಯಾರೂ ಎಣ್ಸ್‌ಕಂಡಿರಲ್ಲ. ಇನ್ನ್ ಪ್ಯಾಟಿ ಬದ್ಯಗೆ ಎಂತ ಆಯಿತ್ತೋ ಅಂದೇಳಿ ಸಮಾ ಸುದ್ದಿ ಇಲ್ಲ. ಬಸ್ಸ್ ಓಡುದ್ ಕೈದ್ ಆಪುಕೋಯಿ ಪೇಪರ್ ಸತೇ ಬತ್ತಿಲ್ಲ. ಶಾಲಿಗೆಲ್ಲ ಒಂದ್ ವಾರ ರಜಿ ಕೊಟ್ಟಿರ್ ಅಂದೇಳಿ ಟಿ.ವಿ. ವಾರ್ತೆಯಗೆ ಕೇಂಡದ್ ಕಂಡ್ ರಜಿ ಸಿಕ್ಕದ್ದಕ್ ಖುಷಿ ಪಡುಕೂ ಆಗ್ದಿದ್ದ್ ನಮನಿ ಹೆದ್ರಿಕಿ ಹುಟ್ಟಿ ಹೋಯಿತ್ತ್. ಹೆಚ್ಚು ಕಡ್ಮಿ ಒಂದ್ ವಾರ ಹೀಂಗೇ ನಡಿತ್. ಎಷ್ಟೋ ಗೂಡಂಗ್ಡಿ ಬೆಂಕಿಯಗೆ ಸುಟ್ಟ್ ಬೂದಿಯಾಯ್ತ್. ಎಷ್ಟೋ ಚೂರಿ ಹಾಕದ್, ಕಲ್ಲ್‌ ಬಿಸಾಡದ್, ಬೆಂಕಿ ಹಚ್ಚದ್ ಸುದ್ದಿ

ಒಟ್ರಾಶಿ ಇಡೀ ಕುಂದಾಪ್ರಕ್ಕೆ ಬೆಂಕಿ ಬಿದ್ದಂಗಾಯಿತ್ತ್. ಎಷ್ಟೋ ಜನ ಅವ್ರ್ ಹಗಿ ತೀರ್ಸ್‌ಕಂಡ್ರ್. ಅಲ್ಲಿನೊರಿಗೆ ಅಷ್ಟ್ ಸೇಲ್ ಇಲ್ದಿದ್ದ್ ಕುಂದಪ್ರಭ ಪೇಪರಿಗೆ ಏಕ್‌ದಂ ಡಿಮ್ಯಾಂಡ್. ಒಂದಕ್ಕೆರ್ಡ್ ರೇಟಿಗೆ ಮಾರಾಟ ಆಯ್ತ್. ಎಲ್ಲಾ ಗಲಾಟಿ ಮುಗ್ದ್ ತಣ್ಣಗಾರ್ ಮೇಲ್ ಸುದ್ದಿ ಹಗೂರ ಹೊರ್ಗ್ ಬಂತ್. ಹುಡ್ಗನ್ ಹೆಸ್ರ್ ಭಾಸ್ಕರ ಕೊಠಾರಿ ಅಂಬ್ರ್. ಅವ ಒಬ್ಳ್ ಸಾಯ್ಬ್ರ್ ಹುಡ್ಗಿನ ಲವ್ ಮಾಡ್ತಿದ್ದ ಅಂಬ್ರ್. ಹುಡ್ಗಿ ಮನ್ಯರಿಗ್ ಒಪ್ಗಿ ಇದ್ದಿತಂಬ್ರ್. ಅವ್ನ್ ಮನ್ಯರಿಗೆ ಒಪ್ಗಿ ಇರ್ಲ್ಲಿಲ್ಲ ಅಂಬ್ರ್. ಅಲ್ಲಲ್ಲ ಅವ್ನ್ ಮನ್ಯರ್ ಒಪ್ಪಿರಂಬ್ರ್. ಹುಡ್ಗಿ ಕಡ್ಯರದ್ದೇ ರಗ್ಳಿ ಅಂಬ್ರ್. ಅಂತೂ ಹೀಂಗೆ ಇದ್ರೆ ಮದಿ ಆಪುದ್ ಕಷ್ಟ ಅಂದೇಳಿ ಅವ್ನೇ ಕಿಡ್ನ್ಯಾಪ್ ಆದ್ ನಾಟ್ಕ ಮಾಡದ್ ಅಂಬ್ರ್… ಅಲ್ಲಲ್ಲ ಹುಡ್ಗಿ ಕಡ್ಯರೇ ಅವನ್ನ ಹುಗ್ಸಿ ಇಟ್ಟದಂಬ್ರ… ಯಾವ್ದನ್ ನಂಬ್ಕೋ ಬಿಡ್ಕೋ ಗೊತ್ತಿಲ್ಲ… ಇವತ್ತಿಗೂ… ಕತಿ ಎಂತದೇ ಇರ್ಲಿ… ಇದೆಲ್ಲಾ ಆರ್ ಮೇಲೆ ಮತ್ತ್ ಕುಂದಾಪ್ರದಗೆ ಹಿಂದೂಗಳ ಮಧ್ಯ ಸಾಯ್ಬ್ರ್ ಮಧ್ಯೆ ಮುಂಚಿನ ಆ ವಿಶ್ವಾಸ ಇವತ್ತಿಗೂ ವಾಪಾಸ್ ಬರಲ್ಲ. ಮೇಲಿಂದ್ ಮೇಲೆ ಎಲ್ಲಾ ಸಮಾ ಇರತ್. ಯಾವ್ದಾರೂ ಬದ್ಯಗೆ ಗಲಾಟಿ ಸುರುವಾದ್ ಸುದ್ದಿ ಗೊತ್ತಾರೆ, ಇಲ್ಲೂ ಕಿಡಿ ಹಾರುಕ್ ಸುರುವಾತ್ತ್. ಗಂಗೊಳ್ಳಿ, ಕಂಡ್ಲೂರು ಕುಂದಾಪುರದಗೆ ಇವತ್ತಿಗೂ ಬೂದಿಯೊಳ್ಗಿನ ಕೆಂಡವೇ ಇದ್

ಇಷ್ಟೆಲ್ಲಾ ಗಲಾಟಿ ಮುಗ್ದ್ ಆರ್ ಮೇಲೆ ಕುಂದಪ್ರಭದಗೆ ಒಂದ್ ಸುದ್ದಿ ಬಂತ್. ಭಾಸ್ಕರ ಕೊಠಾರಿ ಮತ್ತು ಮುನಾವರ್‌ಗೆ ಮದಿ ಅಂಬ್ರ್. ಮುನಾವರ್‌ಗೆ ಸ್ನೇಹಲತಾ(?) ಅಂದೇಳಿ ಪುನರ್‌ನಾಮ್ಕರ್ಣ ಆಯ್ತ್. ಅಂತೂ ಅಷ್ಟೆಲ್ಲಾ ರಾಮಾಯ್ಣ ಮಾಡ್ದ ಕತಿ ಹೀಂಗ್ ಮುಗಿತ್. ಕಡಿಕೆ ಎಲ್ಲ ಸುಖ್ದಂಗೆ ಇದ್ರ್…
ಇದ್ರಾ… ನೀವೆ ಆಲೋಚ್ನಿ ಮಾಡಿ ಹೇಳಿ…. ‘ಕಡಲ ತಡಿಯ ತಲ್ಲಣ’ ಪುಸ್ತ್ಕ ಓದುಕ್ ಸುರು ಮಾಡ್ರ್ ಕೂಡ್ಲೇ ಇದೆಲ್ಲ ಎಂತಕೋ ನೆನ್ಪ್ ಆಯ್ತ್… ಅದನ್ನ್ ಹಾಂಗೇ ನಿಮ್ಮತ್ರ ಹೇಳ್ಕ್ ಅನ್ಸಿ ಹಾಂಗೇ ಹೇಳಿದೆ… ಆಲೋಚ್ನಿ ಮಾಡುದ್-ಬಿಡುದ್ ನಿಮ್ಗೆ ಬಿಟ್ಟಿದೆ…


ಬುದ್ಧಿವಂತ್ರ್ ಜಿಲ್ಲೆ ಅಂದೇಳಿ ಕರ್ಸ್‌ಕಂತಿದ್ದ ಮಂಗ್ಳೂರಿಗೆ ಆದ್ದಾರೂ ಎಂಥದ್? ಇದ್ ಬುದ್ಧಿ ಕಡ್ಮಿ ಆದ್ದಲ್ಲ. ಕಲ್ತದ್ ಹೆಚ್ಚಾಯ್ತ್ ಕಾಲ್ ಮೇಲಾಯ್ತ್ ಅಂಬಂಗೆ ಆಡ್ತ್ರಲಾ ಇವ್ರಿಗೆಲ್ಲ ಎಂಥ ಹೇಳುದ್ ಹೇಳಿ. ಅದೆಂತದೋ ಮತಾಂತರ ಅಂದೇಲಿ ಶುರುವಾದ ಈ ಗಲಾಟಿ ಎಲ್ಲಿಗ್ ಹೋಯ್ ಮುಟ್ಟುತ್ತೋ ಆ ದೇವ್ರೇ ಬಲ್ಲ. ಬೆಂಕಿ ಇಲ್ದೆ ಹೊಗಿ ಏಳುದಿಲ್ಲ. ಫಾರಿನ್ನಿಂದ ದುಡ್ ಬತ್ತಂಬ್ರ್, ದುಡ್ಡಿನ್ ಆಶಿ ತೋರ್ಸಿ ಮರ್ಲ್ ಮಾಡ್ತ್ರಂಬ್ರ್, ಕಾಯ್ಲಿ ಗುಣ ಮಾಡ್ತೆ ಅಂದೇಳಿ ಮಂಡಿ ಹಾಳ್ಮಾಡ್ತ್ರ್ ಅಂಬ್ರ್…ಹೀಂಗೆ ಸುಮಾರ್ ವರ್ಷದಿಂದ್ಲೂ ಗುಸುಗುಸು ಅಂದೇಳಿ ಎಲ್ಲಾ ಮಾತಡ್ಕಂತಿದ್ರ್. ಅದು ಸತ್ಯವೋ ಸುಳ್ಳೋ ಆ ಮಾತ್ ಬದಿಗಿರ್ಲಿ. ಹಾಂಗಂದೇಳಿ ಇವ್ರ್ ಇಗರ್ಜಿ ಮೇಲೆಲ್ಲಾ ಮುರ್ಕಂಡ್ ಬಿದ್ದದ್ ಸಮ್ನಾ? ಎಂತದೇ ಇದ್ರೂ ಅದನ್ನ್ ಕೇಂಬುಕೆ ಒಂದ್ ಕಾನೂನ್, ರೀತಿ-ನೀತಿ ಅಂದೇಳಿ ಇರತ್ತಲ್ದಾ? ಹೀಂಗೆಲ್ಲ ನೆಡಿತಾ ಇತ್ತ್ ಅಂದೇಳಿ ಸರ್ಕಾರದಿಂದ್ಲೇ ತನ್ಕಿ ಮಾಡುಕ್ ಒತ್ತಾಯ ಮಾಡ್ಲಕ್ಕಿದ್ದಿತ್ ಅಲ್ದ. ಒಂದ್ ವೇಳೆ ಹಾಂಗೆಲ್ಲ ನೆಡಿತಿದ್ದದ್ ಹೌದೇ ಅಂತಾರೆ ಅದಕ್ ಸಂಬಂಧಪಟ್ಟರನ್ ಹಿಡ್ದ್ ಜೈಲಿಗೆ ಹಾಕ್ಲಕ್ಕಿದ್ದಿತಲ್ದಾ? ಅದ್ ಬಿಟ್ ಮುಂದ್‌ವರುದ್ ಬ್ಯಾಡ ಇದ್ದಿತಾ ಅಂದೇಳಿ. ಇವ್ರ್ ಇಗರ್ಜಿಗೆ ನುಗ್ರ್, ದಾಳಿ ಮಾಡ್ರ್ ಅಂದೇಳಿ ಅವ್ರ್ ಇವ್ರ್ ಮೇಲ್ ತಿರ್ಗಿ ಬಿದ್ದ್, ಕತ್ತಿ ಚೂರಿಯಗೆಲ್ಲ ಹೊಡ್ಕಂಡ್ ಬಡ್ಕಂಡ್ ಇಷ್ಟೆಲ್ಲಾ ರಗ್ಳಿ ರಾಮಾಯಣ ಆಯ್ತ್ ಕಾಣಿ ಈಗ. ಎಲ್ಲದ್ದಕ್ಕೂ ಹೊಡಿ-ಕಡಿ-ಬಡಿ ಅಂತಾ ಆಯ್ಕಂಡ್ರೆ ನೆಮ್ಮದಿಯಗೆ ಬದ್ಕುಕೆ ಎಡಿತ್ತಾ? ಇವ್ರ್ ನಾಕ್ ಜನಿಗ್ ಹೊಡುದ್, ಇವ್ರ್ ಹೊಡ್ದ್ರ್ ಅಂದೇಳಿ ಅವ್ರ್ ಎಂಟ್ ಜನಿನ ಮೇಲ್ ಕೈ ಮಾಡುದ್.. ಹೀಂಗೆ ಮಾಡ್ತಾ ಹೋದ್ರೆ ಅದಕ್ ತಲಿ ಬುಡ ಇತ್ತಾ ಹೇಳಿ ಕಾಂಬ.

 

ಈ ರಾಜ್ಕಾರಣಿಗಳೆಲ್ಲ ಮಾತಾಡುದ್ ಕೇಂಡ್ರೆ ಮೈಎಲ್ಲಾ ಉರಿ ಬತ್ತ್. ಅವ್ರ್ ಇದ್ರಗೆ ತಮ್ಗೆ ಎಲ್ಲ್ ಪಡಾವ್ ಆತ್ತ್ ಕಾಂಬ ಅಂದೇಳಿ, ಆಚಿ ಬದ್ಯಗೆ ಮಗಿನ್ ತೊಡಿ ಚೂಂಟುದೂ ಅವ್ರೆ, ಈಚಿ ಬದ್ಯಗೆ ತೊಟ್ಲ್ ತೂಗ್ದಾಂಗೆ ನಾಟ್ಕ ಮಾಡುದೂ ಅವ್ರೆ. ಅವ್ರ್ ಬ್ಯಾಳಿ ಬೇಯ್ಸ್‌ಕಂಬುಕೆ ಎಂತ ಬೇಕಾರೂ ಮಾಡ್ತ್ರ್, ಹ್ಯಾಂಗ್ ಬೇಕಾರೂ ನಾಲ್ಗಿ ತಿರ್ಸ್‌ತ್ರ್. ಮೊನ್ನೆ ರಾತ್ರಿ ಎನ್‌ಡಿಟಿವಿ ವಾರ್ತೆಯೊಳ್ಗೆ ಕರ್ನಾಟಕದ್ ರಾಜ್ಕಾರ್ಣಿ ಒಬ್ರ್ ಮಾತಾಡ್ತಿದ್ರ್.. ಅವ್ರ್ ಹೇಳದ್ ಎಂತಾ ಗೊತ್ತಿತ? ಇವ್ರ್ ತಿರ್ಗಿ ಬಿದ್ದದ್ ಸಮ್ನೆ. ಇವ್ರ್ ಕೈಕಟ್ಕಂಡ್ ಕೂಕಣ್ಕ್ ಇದ್ದಿತ್ ಅಂದೇಳಿ ನೀವ್ ಹೇಳುದಾ ಹಂಗಾರೆ ಅಂದೇಳಿ ಪ್ರಶ್ನೆ ಕೇಂಬರಿಗೆ ತಿರ್ಗಿ ಕೇಂತಾ ಇದ್ರ್. ಅಕ್ಲ್ ಇದ್ದರ್ಯಾರಾರೂ ಹೀಂಗ್ ಹೇಳ್ಕಿ ಕೊಡ್ತ್ರಾ? ಇವ್ರ್ ಓಟಿಗೋಸ್ಕರ ಎಂತ ಮಾಡುಕೂ ತಯರಿದ್ರಲಾ ಮರಾಯ್ರೆ. ಇಗರ್ಜಿಗೆ ನುಗ್ಗದ್ ತಪ್ಪೇ… ಹೀಂಗ್ ಮಾಡುಕ್ ಆಗ ಇದ್ದಿತ್. ಅದನ್ನ್ ಯಾರೇ ಮಾಡದ್ದಿದ್ರೂ ತಪ್ಪ್ ತಪ್ಪೇ. ಆರೆ ಹಾಂದೇಳಿ ಇವ್ರ್ ತಿರ್ಗಿ ಹೋಡದ್ ಸಮನೇ ಅಂದೇಳಿ ಹೇಳಿ ಜನ್ರನ್ ಎತ್ತಿ ಕಟ್ಟಿ ಮತ್ತಷ್ಟ್ ಗಲಾಟಿ ಆಪು ಹಾಂಗ್ ಮಾಡ್ತ್ರಲಾ… ಇವ್ರನ್ನೆಲ್ಲಾ ಎಂತ ಮಾಡ್ಕ್ ಹೇಳಿ. ಇಂತ ವಿಷ್ಯದಗೂ ಕೊಳ್ಕಟಿ ರಾಜ್ಕೀಯ ಮಾಡು ಇವ್ರನ್ ಕಂಡ್ರೆ, ಇವ್ರಿಗ್ ಓಟ್ ಹಾಕಿ ಆರ್ಸದ್ದಕ್ಕೆ ನೆಗಾಡ್ಕೋ ಮರ್ಕಕೋ ಗೊತ್ತಾತಿಲ್ಲ.

 

ಅಸ್ಲಿಗೆ ನಮ್ ಅಕ್ಲ್ ನಮ್ ಕೈಲ್ ಇರ್ಕ್. ಯಾವ್ ಧರ್ಮವೇ ಆಯ್ಲಿ, ನಮ್ದ್ ಮೇಲೆ ಬೇರೆಯರದ್ದೆಲ್ಲ ಬುರ್ನಾಸ್ ಅಂತ್ ಹೇಳುದಿಲ್ಲ. ಯಾವ ಧರ್ಮದ ಪುಸ್ತಕದಗೂ ಹಾಂಗಂತೇಳಿ ಇರುದಿಲ್ಲ. ಅವ್ರವ್ರ್ ಮನ್ಸಂಗೆ ಅವ್ರವ್ರ್ ಧರ್ಮ ಜಾತಿ ದೊಡ್ದ್ ಅಂದಿರತ್ತ್. ಇರ್ಲಿ… ಅದು ನಮ್ ಮನ್ಸೊಳ್ಗೇ ಇರ್ಲಿ, ಮನೆಯೊಳ್ಗೆ ಇರ್ಲಿ. ಹೀಂಗೆಲ್ಲ ಹೊರ್ಗ್ ಬಪ್ಪುಕಾಗ. ಇದನ್ನ ಎಲ್ಲರೂ ತಿಳ್ಕಂಡ್ರೆ ಈ ಗೌಜ್-ಗಲಾಟಿ ಪಂಚತ್ಗಿ ಎಲ್ಲಿರ್ತಿತ್ತ್. ಇದೆಲ್ಲಾ ನಾವ್ ನಾವೇ ಮಾಡ್ಕಂಡದ್, ಈಗ ನಾವ್ ನಾವೇ ಅನ್ಭಯಿಸ್ಕ್. ಶಾಂತಿ, ನೆಮ್ಮದಿ, ಒಗ್ಗಟ್ಟು, ಪ್ರೀತಿ ಇದನ್ನೆಲ್ಲಾ ಹೇಳುವ ಬೋಧ್ನಿ ಎಲ್ಲಾ ಪುಕ್ಳಿ ಅಡಿ ಹಾಯ್ಕಂಡ್, ಒಬ್ರ್ ಮೇಲ್ ಒಬ್ರ್ ಹಲ್ಲ್ ಮಸೀತಾ ಕೂಕಂಡ್ರೆ ನಾಳಿಗೆ ಬರೀ ಧರ್ಮ ಮಾತ್ರ ಉಳಿತ್ತ್ !! ಅದನ್ನ್ ಆಚರ್ಣಿ ಮಾಡ್ಕಾದರೆಲ್ಲಾ ಹೀಂಗೆ ಬಡ್ದಾಡ್ಕಂಡ್ ಸತ್ತ್ ಹೋಯಿ ಆಯಿರತ್ತಲೆ!!! ಇಷ್ಟ್ ಸಣ್ಣ್ ವಿಷ್ಯ ಅರ್ಥ ಮಾಡ್ಕಂಬ್ಕೆ ಆಗ್ದಿದ್ರ್ ಮೇಲೆ ಏನ್ ಬುದ್ಧಿವಂತ್ಕಿ ಇದ್ರೆ ಏನ್ ಬಂತ್ ಹೇಳಿ. ನಾಮ್ ಜಿಲ್ಲೆ ಬುದ್ಧಿವಂತ್ರ್ ಜಿಲ್ಲೆ ಅಂದ್ರೆ ಯಾರಾರೂ ನೆಗಾಡುಕಿದ್ರ್ ಅಷ್ಟೇ